ಕಳೆದ ದಶಕದಲ್ಲಿ ಭಾರತದ ಚುನಾವಣಾ ಆಯೋಗ (ಇಸಿಐ) ಚುನಾವಣೆಗಳನ್ನು ಅಪಾರದರ್ಶಕ ಮತ್ತು ಸಂವಿಧಾನಬಾಹಿರ ವಿಧಾನದಲ್ಲಿ ನಡೆಸುತ್ತಿರುವ ಬಗ್ಗೆ ತೀವ್ರ ಕಳವಳ ಮತ್ತು ನೋವನ್ನು ವ್ಯಕ್ತಪಡಿಸುತ್ತ, ಮಹಾಧಿವೇಶನ ಅಂಗೀಕರಿಸಿರುವ ನಿರ್ಣಯ, ಸ್ವಾಯತ್ತತೆಯ ಸವೆತ, ರಾಜಕೀಯ ವಿರೋಧದ ಬಗ್ಗೆ ತಿರಸ್ಕಾರ ಮತ್ತು ಚುನಾವಣಾ ಕಾನೂನುಗಳು, ನಿಯಮಗಳು ಮತ್ತು ಕೈಪಿಡಿಗಳಲ್ಲಿ ಯಾವುದೇ ನಾಚಿಕೆಯಿಲ್ಲದೆ ಚಾಲಾಕಿತನ ತೋರಿರುವುದು, ಸದಾ ಹಣಬಲ ಹೊಂದಿರುವ ಪಕ್ಷಗಳ ಪರವಾದ ಅಂಶಗಳಿಂದ ತುಂಬಿರುವ ಭಾರತದ ಚುನಾವಣಾ ಪ್ರಕ್ರಿಯೆಯನ್ನು ಒಂದು ಸಂಪೂರ್ಣ ಪ್ರಹಸನವನ್ನಾಗಿ ಮಾಡಿದೆ ಎಂದು ಹೇಳಿದೆ.
ಚುನಾವಣಾ ಆಯುಕ್ತರ ನೇಮಕಾತಿಯಲ್ಲಿ ಸ್ವಾತಂತ್ರ್ಯವನ್ನು ಖಚಿತಪಡಿಸಲು ನವೆಂಬರ್ 2023ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಸ್ಪಷ್ಟ ನಿರ್ದೇಶನವನ್ನು ಕಣ್ಣಿಗೆ ರಾಚುವಂತೆ ಉಲ್ಲಂಘಿಸಿ, ಪ್ರಸ್ತುತ ಬಿಜೆಪಿ ಆಡಳಿತವು, ಭಾರತದ ಮುಖ್ಯ ನ್ಯಾಯಾಧೀಶರನ್ನು ಹೊರಗಿಟ್ಟು, ಆಯ್ಕೆ ಸಮಿತಿಯ ಮೂವರು ಸದಸ್ಯರಲ್ಲಿ ಇಬ್ಬರು ಆಳುವ ಸಂಪುಟದ ಸದಸ್ಯರಾಗಿರುತ್ತಾರೆ ಎನ್ನುವ ಮೂಲಕ ಆಯ್ಕೆ ಪ್ರಕ್ರಿಯೆಯನ್ನು ಬದಲಾಯಿಸುವ ಕಾನೂನನ್ನು ತರಾತುರಿಯಿಂದ ಜಾರಿಗೆ ತಂದಿತು.
ಭಾರತದ ಚುನಾವಣಾ ಆಯೋಗವು ಭಾರತೀಯ ಜನರ ಒಂದು ಸಾಕಷ್ಟು ದೊಡ್ಡ ವಿಭಾಗದ ವಿಶ್ವಾಸವನ್ನು ಕಳೆದುಕೊಂಡಿದೆ. ಏಪ್ರಿಲ್ 2024 ರಲ್ಲಿ, ಅಭಿವೃದ್ಧಿಶೀಲ ಸಮಾಜಗಳ ಅಧ್ಯಯನ ಕೇಂದ್ರ (ಸಿಎಸ್ಡಿಎಸ್) ನಡೆಸಿದ ಸಮೀಕ್ಷೆಯು ಒಂದು ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದೆ. ಇಂದು ಕೇವಲ ಶೇ. 28ರಷ್ಟು ಭಾರತೀಯರು ಮಾತ್ರ ಚುನಾವಣಾ ಆಯೋಗದಲ್ಲಿ ಯಾವುದೇ ನಂಬಿಕೆ ಅಥವಾ ವಿಶ್ವಾಸವನ್ನು ಉಳಿಸಿಕೊಂಡಿದ್ದಾರೆ ಎಂದು ಅದು ಬಹಿರಂಗಪಡಿಸಿದೆ.
ಭಾರತದ ಚುನಾವಣಾ ವ್ಯವಸ್ಥೆಯು ಹೇಗೆ ಮತ್ತು ಎಷ್ಟರಮಟ್ಟಿಗೆ ಸವೆದುಹೋಗಿದೆ ಎಂಬುದು ಸಂಕೀರ್ಣವಾಗಿದೆ ಮತ್ತು ಬಹು ಹಂತಗಳಲ್ಲಿ ಚಾಲಾಕಿತನಗಳನ್ನು ಒಳಗೊಂಡಿದೆ. ಈ ಪ್ರಶ್ನೆಗಳನ್ನು ಹಲವಾರು ತಜ್ಞರು ಮತ್ತು ನಾಗರಿಕ ಗುಂಪುಗಳು ಕಟ್ಟುನಿಟ್ಟಾಗಿ ಪರಿಶೀಲಿಸಿದ್ದಾರೆ. ಅವು ಮೂಲಭೂತವಾಗಿ ಚುನಾವಣಾ ಆಯೋಗದ ಕಾರ್ಯನಿರ್ವಹಣೆಯ ಸಂಪೂರ್ಣ ಅಪಾರದರ್ಶಕ ವಿಧಾನವನ್ನು ಕುರಿತಾಗಿವೆ:
1) ಹಿಂದಿನ ಮತ್ತು ಪ್ರಸ್ತುತ ಮತದಾರರ ಪಟ್ಟಿಗಳನ್ನು ಒಳಗೊಂಡಂತೆ ಮತದಾರರ ದತ್ತಾಂಶವನ್ನು ಬಿಡುಗಡೆ ಮಾಡದಿರುವುದು.
2) ಚುನಾವಣಾ ಕಾನೂನು ಮತ್ತು ಆಯೋಗದ ಕೈಪಿಡಿಗಳ ಅಡಿಯಲ್ಲಿ ಕಡ್ಡಾಯಗೊಳಿಸಲಾದ 17-ಸಿ ಮತ್ತು 17-ಎ ಫಾರ್ಮ್ಗಳು, ವೀಡಿಯೊ ರೆಕಾರ್ಡಿಂಗ್ಗಳು ಮತ್ತು ಸೂಚಕ ಕಾರ್ಡ್ಗಳನ್ನು ಬಿಡುಗಡೆ ಮಾಡದಿರುವುದು.
3) ಮತದಾರರ ಹೆಸರುಗಳ ನಕಲಿ ಸೇರ್ಪಡೆಗಳು ಮತ್ತು ತೆಗೆಯುವುದರ ಮೂಲಕ ಮತದಾರರ ಪಟ್ಟಿಗಳಲ್ಲಿ ಚಾಲಾಕಿತನ.
ಚುನಾವಣಾ ಆಯೋಗದ ನಡವಳಿಕೆಯ ಬಗ್ಗೆ ಒಂದು ಮಹತ್ವದ ಪ್ರಶ್ನೆ, ಎಲೆಕ್ಟ್ರಾನಿಕ್ ಮತ ಯಂತ್ರಗಳ (ಇವಿಎಂ) ವಿಶ್ವಾಸಾರ್ಹತೆ ಮತ್ತು ಆಯೋಗದಿಂದ ಚುನಾವಣಾ ಪ್ರಕ್ರಿಯೆಯ ಮೇಲ್ವಿಚಾರಣೆಗೆ ಸಂಬಂಧಿಸಿದೆ.
ಮೊದಲಿಗೆ 2014ರ ಲೋಕಸಭಾ ಚುನಾವಣೆಗಳಲ್ಲಿ, 2017ರ ಉತ್ತರಪ್ರದೇಶ ಮತ್ತು ಗುಜರಾತ್ ರಾಜ್ಯ ಚುನಾವಣೆಗಳಲ್ಲಿ ಮತ್ತು 2019ರ ಲೋಕಸಭಾ ಚುನಾವಣೆಗಳಲ್ಲಿ ಮಾದರಿ ನೀತಿ ಸಂಹಿತೆ (ಎಂಸಿಸಿ)) ಮತ್ತು ಜನತಾ ಪ್ರಾತಿನಿಧ್ಯ ಕಾಯ್ದೆಯ ಉಲ್ಲಂಘನೆಯಲ್ಲಿ ಚುನಾವಣೆಗಳಲ್ಲಿ ಉಭಯಪಕ್ಷೀಯ ನಡವಳಿಕೆಯ ಒಂದು ಪ್ರಮುಖ ಉಲ್ಲಂಘನೆಯು ಸ್ಪಷ್ಟವಾಗಿ ಕಂಡುಬಂದಿತು. ಪ್ರಧಾನ ಮಂತ್ರಿಗಳು, ಗೃಹ ಮಂತ್ರಿಗಳು, ಉತ್ತರಪ್ರದೇಶ ಮುಖ್ಯಮಂತ್ರಿಗಳು ಮತ್ತು ಇತರರು ಸೇರಿದಂತೆ ಆಳುವ ಪಕ್ಷದ ಪ್ರಮುಖ ಪ್ರಚಾರಕರ ವಿರುದ್ಧ, ಬಹಿರಂಗವಾಗಿ ಕೋಮುವಾದಿ ಮನವಿಗಳನ್ನು ಮಾಡಿದ್ದಾರೆ ಮತ್ತು ಮಾದರಿ ನೀತಿಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಹಲವಾರು ದೂರುಗಳನ್ನು ನೀಡಲಾಗಿತ್ತು, ಆದರೆ ಅವುಗಳನ್ನು ನಿರ್ಲಕ್ಷಿಸಲಾಯಿತು, ಇದು ಚುನಾವಣಾ ಆಯೋಗದ ಸ್ಪಷ್ಟವಾದ ಪಕ್ಷಪಾತೀ ನಿಲುವನ್ನು ಬಯಲಿಗೆ ತಂದಿತು. ಬಿಜೆಪಿಯ ಹಿತಾಸಕ್ತಿಗಳನ್ನುಈಡೇರಿಸಲು ಸರ್ಕಾರಿ ಸಂಪನ್ಮೂಲಗಳನ್ನು ಎಗ್ಗಿಲ್ಲದೆ ಬಳಸುವುದರ ವಿರುದ್ಧ ಕ್ರಮ ಕೈಗೊಳ್ಳಲು ಆಯೋಗ ವಿಫಲವಾಗಿದೆ. ಇಂದು, ರಾಜಕೀಯ ಸ್ಪರ್ಧಿಗಳು ಮತ್ತು ನಾಗರಿಕರಿಗೆ ಪರಿಷ್ಕರಣೆಗಳಿರುವ ಮತ್ತು ಇಲ್ಲದ ಮತದಾರರ ಪಟ್ಟಿಗಳನ್ನು ಕೂಡ ನಿರಾಕರಿಸಲಾಗುತ್ತಿದ್ದು, ರಾಜಕೀಯ ವಿರೋಧ ಪಕ್ಷದ ಅತ್ಯಂತ ಮೂಲಭೂತ ಸಾಂವಿಧಾನಿಕ ಹಕ್ಕುಗಳನ್ನು ಸಹ ಯಾವುದೇ ನಾಚಿಕೆಯಿಲ್ಲದೆ ಕಸಿದುಕೊಳ್ಳಲಾಗುತ್ತಿದೆ, ತೀರಾ ಇತ್ತೀಚೆಗೆ, ನಕಲಿ ಮತದಾರ ಫೋಟೋ ಐಡೆಂಟಿಟಿ ಕಾರ್ಡ್ಗಳ ಸಮಸ್ಯೆಯೂ ಬೆಳಕಿಗೆ ಬಂದಿದೆ.
2024ರ ಸಂಸತ್ತಿನ ಚುನಾವಣೆಗಳ ನಂತರ ತಕ್ಷಣವೇ, ನಾಗರಿಕರ ಗುಂಪುಗಳು ದೇಶಾದ್ಯಂತ ಕನಿಷ್ಠ 79 ಲೋಕಸಭಾ ಕ್ಷೇತ್ರಗಳಲ್ಲಿ “ಜನಾದೇಶ” ಫಲಿತಾಂಶಗಳಲ್ಲಿ ಪ್ರತಿಫಲಿಸಿಲ್ಲ ಎಂದು ಸೂಚಿಸುವ ದತ್ತಾಂಶವನ್ನು ಪ್ರಸ್ತುತಪಡಿಸುವ ಒಂದು ಪುರಾವೆ ಸಹಿತ ವರದಿಯನ್ನು (ವೋಟ್ ಫಾರ್ ಡೆಮಾಕ್ರಸಿ -ವಿಎಫ್ಡಿ) ಪ್ರಕಟಿಸಿದವು: ಗಮನಾರ್ಹ ಸಂಗತಿಯೆಂದರೆ, ಸಂಜೆ 7-8 ಗಂಟೆಗೆ ವರದಿಯಾದ ಮತದಾನದ ಅಂಕಿಅಂಶಗಳು ಮತ್ತು ಆಯೋಗ ಒದಗಿಸಿದ ಮತದಾನದ ಶೇಕಡಾವಾರು ಅಂಕಿಅಂಶಗಳಿಂದ ಲೆಕ್ಕಹಾಕಿದ ಮತದಾನದ ಅಂತಿಮ ಅಂಕಿಅಂಶಗಳ ನಡುವಿನ ಹೆಚ್ಚಳವು ಎಲ್ಲಾ ಹಂತಗಳಲ್ಲಿಒಟ್ಟಾಗಿ 5 ಕೋಟಿ ಮತಗಳ ಹತ್ತಿರದಲ್ಲಿದೆ. ನಿಖರವಾಗಿ ಹೇಳಬೇಕೆಂದರೆ 4,65,46,885. ತಜ್ಞರ ವಿವರವಾದ ರಾಜ್ಯವಾರು ಗಣಿತ ಮತ್ತು ಸಂಖ್ಯಾಶಾಸ್ತ್ರೀಯ ಲೆಕ್ಕಾಚಾರಗಳು ಈ ನಕಲಿ ಮತಗಳು 2024ರ ಲೋಕಸಭಾ ಚುನಾವಣೆಯಲ್ಲಿ ಸುಮಾರು 79 ಸ್ಥಾನಗಳಲ್ಲಿ ಎನ್ಡಿಎ/ಬಿಜೆಪಿ ಕೂಟಕ್ಕೆ ಪ್ರಯೋಜನವನ್ನು ನೀಡಿರುವ ಸಾಧ್ಯತೆಯಿದೆ ಎಂದು ಹೇಳುತ್ತವೆ, ಇದು ಯಾರು/ಯಾವ ಕೂಟ ಅಧಿಕಾರಕ್ಕೆ ಬಂದಿತು ಎಂಬುದನ್ನು ನಿರ್ಧರಿಸಿದೆ. ಮತಗಳಲ್ಲಿ ಈ ವಿವರ ನೀಡದ ಹೆಚ್ಚಳಕ್ಕೆ ಯಾವುದೇ ಕಾರಣಗಳನ್ನು ಕೊಡಲು ಚುನಾವಣಾ ಆಯೋಗ ನಿರಾಕರಿಸಿದೆ.
ಮತ್ತೊಂದೆಡೆ, ಒಟ್ಟಾರೆಯಾಗಿ, ಬಿಜೆಪಿಗೆ ಮತ ಚಲಾಯಿಸುವ ಸಾಧ್ಯತೆ ಕಡಿಮೆ ಇರುವ ಧಾರ್ಮಿಕ ಮತ್ತು ಜಾತಿ ಗುಂಪುಗಳ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಇರುವ ಪ್ರದೇಶಗಳಲ್ಲಿ ಮತದಾರರ ಪಟ್ಟಿಯಿಂದ ತೆಗೆದ ಹೆಸರುಗಳ ಸಂಖ್ಯೆಯ ಪ್ರಮಾಣಾತ್ಮಕವಾಗಿ ಹೆಚ್ಚಿದೆ ಎಂದು ಕೆಲವು ಕಟ್ಟುನಿಟ್ಟಾದ ಕ್ಷೇತ್ರವಾರು ಸಮೀಕ್ಷೆಗಳು ಸೂಚಿಸುತ್ತವೆ. ಇದಲ್ಲದೆ, ನಕಲಿ ಮತದಾರರನ್ನು ಗುರುತಿಸಲು ಹೊಸ ಮತದಾರರ ಸೇರ್ಪಡೆಯ ಬಗ್ಗೆ ಮತ್ತಷ್ಟು ಮತ್ತು ಸಮಗ್ರವಾದ ಪರಿಶೀಲನೆಯ ಅಗತ್ಯವಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ 2024ರ ಸ್ವತಂತ್ರ ಅಧ್ಯಯನಗಳು ಏಪ್ರಿಲ್ 2024ರಲ್ಲಿ ನಡೆದ ಲೋಕಸಭಾ ಚುನಾವಣೆ ಮತ್ತು ನವೆಂಬರ್ 2024ರಲ್ಲಿ ನಡೆದ ವಿಧಾನಸಭಾ ಚುನಾವಣೆಯ ನಡುವಿನ ಏಳು ತಿಂಗಳಲ್ಲಿ ಮತದಾರರ ‘ನೋಂದಣಿ’ಯಲ್ಲಿ ಆಘಾತಕಾರಿ ಹೆಚ್ಚಳವನ್ನು ಬಯಲಿಗೆಳೆದಿವೆ, ಇದು 40,81,229 ರಷ್ಟಿತ್ತು. ಅಂದರೆ ಮಾಸಿಕ ನೋಂದಣಿ (ಏಪ್ರಿಲ್ 2024-ನವೆಂಬರ್ 2024) ಸರಾಸರಿ 5,83,032 ಇತ್ತು. ತದ್ವಿರುದ್ಧವಾಗಿ, 2019-2024ರ ನಡುವಿನ ಐದು ವರ್ಷಗಳ ಅವಧಿಯಲ್ಲಿ ತಿಂಗಳಿಗೆ ಸರಾಸರಿ ಮತದಾರರ ನೋಂದಣಿ ಕೇವಲ 71,116 ಆಗಿದ್ದು, ಅದರ ಹಿಂದಿನ 2014-2019ರ ಐದು ವರ್ಷಗಳಲ್ಲಿ ಕೇವಲ 1,31,302 ಮಾತ್ರ. ಈ ಸೇರ್ಪಡೆಗಳನ್ನು ಆಳುವ ಬಿಜೆಪಿ ನೇತೃತ್ವದ ಕೂಟದ ಮತಗಳನ್ನು ಹಿಗ್ಗಿಸುವ ಆಶಯದಿಂದ ಮಾಡಲಾಗಿದೆ ಎಂಬ ದಾವೆಯನ್ನುಇದು ದೃಢೀಕರಿಸುತ್ತದೆ. ಇದುವರೆಗೂ ಹಲವು ಬಾರಿ ಆಗ್ರಹಿಸಿದರೂ, ಈ ಸೇರ್ಪಡೆಗಳ ದಸ್ತಾವೇಜುಗಳನ್ನು ಒದಗಿಸಿಲ್ಲ.
ಇದರ ಜೊತೆಗೆ, ಉತ್ತರಪ್ರದೇಶ, ಮಹಾರಾಷ್ಟ್ರ, ಗುಜರಾತ್ ಮತ್ತು ಅಸ್ಸಾಂಗಳಲ್ಲಿ ಚುನಾವಣೆ ನಡೆಸುವ ಚುನಾವಣಾ ಅಧಿಕಾರಿಗಳ (ಆರ್ಒ) ಪ್ರಶ್ನಾರ್ಹ ಮತ್ತು ಪಕ್ಷಪಾತದ ನಡವಳಿಕೆಯನ್ನು ಕಂಡು ಬಂದಿದ್ದು, 56 ಕ್ಷೇತ್ರಗಳಿಂದ ದಾಖಲಿತ ದೂರುಗಳು ಬಂದಿವೆ. ಇನ್ನೂ ಕೆಟ್ಟ ಸಂಗತಿಯೆಂದರೆ, ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವುದನ್ನು ತಡೆಯಲು ರಾಜ್ಯ ಪೊಲೀಸ್ ವ್ಯವಸ್ಥೆಯನ್ನು ಬಳಸಿರುವುದು.
ಇನ್ನೊಂದು ಗಂಭೀರ ಲಕ್ಷಣವೆಂದರೆ, 2017ರಲ್ಲಿ ಪರಿಚಯಿಸಲಾದ ಮತ್ತು ಅಂತಿಮವಾಗಿ 2024ರ ಆರಂಭದಲ್ಲಿ ಭಾರತದ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಸಂವಿಧಾನಬಾಹಿರ ಚುನಾವಣಾ ಬಾಂಡ್ ಯೋಜನೆಯ ಮೂಲಕ ಕಾರ್ಪೊರೇಟ್-ಬಿಜೆಪಿ ನಂಟಿನ ಲಜ್ಜೆಗೆಟ್ಟ ಸಾರ್ವಜನಿಕ ಪ್ರದರ್ಶನ. ಆಡಳಿತಾರೂಢ ಬಿಜೆಪಿ ಐದು ವರ್ಷಗಳಲ್ಲಿ ಚುನಾವಣಾ ಬಾಂಡ್ಗಳ ಮೂಲಕ ಪಡೆದ ನಿಧಿಗಳಲ್ಲಿಸುಮಾರು 8,500 ಕೋಟಿ ರೂ.ಗಳ ಅಗಾಧ ಪಾಲನ್ನು ಪಡೆದಿದ್ದರೂ, ಅದು ಅವಕಾಶದಲ್ಲಿ ಅಸಮತೆಯನ್ನು ಸೃಷ್ಟಿಸಿದರೂ, ಆಳುವ ಪಕ್ಷವು ಕಾನೂನು ಬಾಹಿರ ರೀತಿಯಲ್ಲಿ ಸಂಪಾದಿಸಿದ ಈ ಹಣವನ್ನು ಹಿಂದಿರುಗಿಸಲು ಅಥವಾ ಅದರ ವೆಚ್ಚವನ್ನು ವಿವರಿಸಲು ಒತ್ತಾಯಿಸಲಾಗಿಲ್ಲ ಎಂದಿರುವ ಮಹಾಧಿವೇಶನದ ನಿರ್ಣಯ, ಇಲ್ಲಿಸುಪ್ರೀಂ ಕೋರ್ಟ್ನಲ್ಲಿ ಚುನಾವಣಾ ಬಾಂಡ್ಗಳನ್ನು ಪ್ರಶ್ನಿಸುವಲ್ಲಿ ಪಕ್ಷದ ಮಹತ್ವದ ಪಾತ್ರವನ್ನು ನೆನಪಿಸಿಕೊಂಡಿದೆ.
ಮತದಾರ ಫೋಟೋ ಗುರುತು ಕಾರ್ಡನ್ನು ಆಧಾರ್ ಕಾರ್ಡ್ನೊಂದಿಗೆ ಜೋಡಿಸುವ ಆಯೋಗದ ಇತ್ತೀಚಿನ ಕ್ರಮವನ್ನು ಸಹ ತೀವ್ರವಾಗಿ ವಿರೋಧಿಸಬೇಕಾಗಿದೆ. ಏಕೆಂದರೆ ಇದು ಚುನಾವಣಾ ಪ್ರಕ್ರಿಯೆಯ ನಿಯಂತ್ರಣವನ್ನು (ಮತದಾರರ ಸೇರ್ಪಡೆ ಮತ್ತು ಅಳಿಸುವಿಕೆ) ಕೇಂದ್ರ ಸರ್ಕಾರದಿಂದ ನಿಯಂತ್ರಿಸಲ್ಪಡುವ ಯುಐಡಿಎಐ ಕೈಯಲ್ಲಿ ಇರಿಸುತ್ತದೆ. ಇದಲ್ಲದೆ, ಮತದಾರ ಫೋಟೋ ಗುರುತು ಕಾರ್ಡ್ ಪೌರತ್ವದ ಪುರಾವೆಯಾಗಿದ್ದರೆ, ಆಧಾರ್ ಕಾರ್ಡ್ ಕೇವಲ ಗುರುತಿನ ನೆಲೆಯಾಗಿದೆ.
ಈ ಎಲ್ಲಾ ಕಳವಳಕಾರೀ ಬೆಳವಣಿಗೆಗಳಿಂದಾಗಿ ಚುನಾವಣಾ ಆಯೋಗ ಉತ್ತರದಾಯಿಯಾಗಬೇಕು ಮತ್ತು ಮತದಾನದ ವೇಳೆಯಲ್ಲಿ ಪಾರದರ್ಶಕತೆಗೆ ಮರಳಬೇಕು ಎಂದು ಆಗ್ರಹಿಸುವ ಒಂದು ಸಾಮೂಹಿಕ ಜನಾಂದೋಲನಕ್ಕೆ ಪಕ್ಷವನ್ನು ಬದ್ಧಗೊಳಿಸುವುದು ಅಗತ್ಯವಾಗಿದೆ ಎಂದು ನಿರ್ಣಯ ಹೇಳಿದೆ. ಚುನಾವಣಾ ಆಯೋಗದ ಜವಾಬುದಾರಿಕೆಯನ್ನು ಖಚಿತಪಡಿಸಬೇಕು ಮತ್ತು ಎಲ್ಲಾ ದತ್ತಾಂಶಗಳನ್ನು ರಾಜಕೀಯ ವಿರೋಧ ಪಕ್ಷಗಳಿಗೆ ಮತ್ತು ಎಲ್ಲಾ ಭಾರತೀಯ ನಾಗರಿಕರಿಗೆ ಸತತವಾಗಿ ಮತ್ತು ಪಾರದರ್ಶಕವಾಗಿ ಲಭ್ಯವಾಗುವಂತೆ ಮಾಡಬೇಕು ಎಂದು ನಿರ್ಣಯ ಆಗ್ರಹಿಸಿದೆ.
ಆದ್ದರಿಂದ, ಚುನಾವಣಾ ವ್ಯವಸ್ಥೆಯಲ್ಲಿನ ದುರಾಚರಣೆಗಳು ಬಹಿರಂಗಗೊಳ್ಳುವಂತೆ ಮಾಡಲು ಮತ್ತು ಪ್ರತಿಯೊಬ್ಬ ಭಾರತೀಯ ಮತದಾರರು ಭಯ ಅಥವಾ ಆಮಿಷವಿಲ್ಲದೆ ತಮ್ಮ ಮತವನ್ನು ಚಲಾಯಿಸಲು ಪ್ರೋತ್ಸಾಹಿಸುವಂತೆ ಮಾಡಲು ಪ್ರಯತ್ನಗಳನ್ನು ತುರ್ತಾಗಿ ತೀವ್ರಗೊಳಿಸಬೇಕು ಎಂದು ಮಹಾಧಿವೇಶನ ನಿರ್ಧರಿಸಿದೆ. ಚುನಾವಣಾ ಆಯೋಗ ಸ್ವತಂತ್ರವಾಗಿ ಮತ್ತು ಪಾರದರ್ಶಕವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಮತ್ತು ಚುನಾವಣೆಗಳಲ್ಲಿ ಸಮಾನ ಅವಕಾಶಗಳನ್ನು ಮತ್ತೆ ಒದಗಿಸಲು ಪ್ರಚಾರ –ಪ್ರಕ್ಷೋಭೆ ನಡೆಸಲು ಪಕ್ಷ ಬದ್ಧವಾಗಿದೆ ಎನ್ನುತ್ತ ಮಹಾಧಿವೇಶನ ದೇಶದಲ್ಲಿ ರಾಜಕೀಯ ಪ್ರಜಾಪ್ರಭುತ್ವವನ್ನು ರಕ್ಷಿಸಲು ಇದು ಅತ್ಯಗತ್ಯ ಮತ್ತು ಒಂದು ಪೂರ್ವಷರತ್ತು ಎಂಬುದರಲ್ಲಿ ಬೇರೆ ಮಾತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.