ಬೆಲೆ ಏರಿಕೆ: ಜನತೆಯನ್ನು ಆರ್ಥಿಕವಾಗಿ ಸುಲಿಗೆ ಮಾಡುವ ಜನವಿರೋಧಿ ಕ್ರಮ

ಕೇಂದ್ರ ಸರಕಾರವು ಅಡುಗೆ ಅನಿಲದ ಬೆಲೆಯನ್ನು ಪ್ರತಿ ಸಿಲಿಂಡರಿಗೆ 50 ರೂಪಾಯಿಗಳಷ್ಟು ಹೆಚ್ಚಳ ಮಾಡಿ, ಜನತೆಯ ಮೇಲೆ ಬೆಲೆಯೇರಿಕೆಯ ಬರೆ ಎಳೆದಿದೆ ಎಂದಿರುವ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ರಾಜ್ಯ ಸಮಿತಿಯು ಕೇಂದ್ರ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದೆ.

ಅಡುಗೆ ಅನಿಲದ ಬೆಲೆಯೇರಿಕೆಯನ್ನು ಸಾಮಾನ್ಯ ಮತ್ತು ರಿಯಾಯಿತಿದಾರರು ಇಬ್ಬರಿಗೂ ಅನ್ವಯಿಸಲಾಗಿದೆ. ಇದು ಜನರ ಮೇಲೆ ವಾರ್ಷಿಕ ರೂ. 7000 ಕೋಟಿ ಹೊರೆ ಹೊರಿಸಿದೆ. ಪೆಟ್ರೋಲ್ ಮತ್ತು ಡೀಸಲ್ ಎರಡರ ಮೇಲೂ ರೂ. 32,000 ಕೋಟಿಯಷ್ಟು ಅಬಕಾರಿ ಸುಂಕವನ್ನು ಹೆಚ್ಚಳ ಮಾಡಿದೆ. ತೈಲ ಮತ್ತು ಅನಿಲದ ಅಂತರರಾಷ್ಟ್ರೀಯ ಬೆಲೆ ಕುಸಿತದ ಲಾಭವನ್ನು ಜನರಿಗೆ ತಲುಪಿಸುವ ಬದಲು, ಆ ಲಾಭವನ್ನು ಕೇಂದ್ರ ಸರಕಾರವು ತಾನೇ ಪಡೆದು ಜನರಿಗೆ ಇನ್ನಷ್ಟು ಬೆಲೆಯೇರಿಕೆಯ ಹೊರೆಯನ್ನು ಹಾಕುತ್ತಿದೆ. ಹಣದುಬ್ಬರದಿಂದ ಈಗಾಗಲೇ ಜನರ ಜೀವನವು ಕಷ್ಟದಲ್ಲಿದೆ. ಈ ಬೆಲೆಯೇರಿಕೆಯಿಂದ ಜನತೆಯ ಬದುಕು ಮತ್ತಷ್ಟು ಕಷ್ಟಕ್ಕೆ ಈಡಾಗಲಿದೆ. ವಿಶೇಷ ಅಬಕಾರಿ ಸುಂಕದ ಹೆಸರಿನಲ್ಲಿ ಒಕ್ಕೂಟದ ತತ್ವಗಳನ್ನು ಗಾಳಿಗೆ ತೂರಿ ತನ್ನ ಆಧಾಯವನ್ನು ಹೆಚ್ಚು ಮಾಡಿಕೊಳ್ಳುವ ಕೇಂದ್ರ ಸರಕಾರದ ಧೋರಣೆಯು ಜನವಿರೋಧಿಯಾಗಿದೆ ಎಂದು ಸಿಪಿಐ(ಎಂ) ಟೀಕಿಸಿದೆ.

ರಾಜ್ಯ ಸರಕಾರವೂ ಹಾಲಿನ ಬೆಲೆ ಏರಿಕೆ, ನೀರು, ತ್ಯಾಜ್ಯ ವಿಲೇವಾರಿ ಮತ್ತಿತರ ನಾಗರೀಕ ಸೌಲಭ್ಯಗಳ ತೆರಿಗೆಯಲ್ಲಿ ಹೆಚ್ಚಳ ಮಾಡಿದೆ. ಈಗಾಗಲೆ ಮೆಟ್ರೊ ದರ ಹೆಚ್ಚಳ ಮಾಡಲಾಗಿದೆ. ಹೀಗೆ ಬಿಜೆಪಿ ಮತ್ತು ಕಾಂಗ್ರೆಸ್ ಸರಕಾರಗಳು ನವ ಉದಾರವಾದಿ ನೀತಿಗಳನ್ನು ವೇಗವಾಗಿ ಜಾರಿ ಮಾಡುತ್ತಿವೆ. ಇದು ಜನತೆಯನ್ನು ಆರ್ಥಿಕವಾಗಿ ಸುಲಿಗೆ ಮಾಡುವ ಜನವಿರೋಧಿ ಕ್ರಮವಾಗಿದೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳೂ ಪರಸ್ಪರ ಬೆಲೆಯೇರಿಕೆಯ ಬಗ್ಗೆ ಕೆಸರೆರಚಾಟದಲ್ಲಿ ತಲ್ಲೀನವಾಗಿವೆ, ಮತ್ತು ಜನತೆಯ ಹಿತವನ್ನು ಮೂಲೆಗುಂಪು ಮಾಡುತ್ತಿವೆ ಎಂದಿರುವ ಸಿಪಿಐ(ಎಂ) ರಾಜ್ಯ ಸಮಿತಿಯು, ಎರಡೂ ಪಕ್ಷಗಳ ಈ ಜನವಿರೋಧಿ ನಡೆಯನ್ನು ತೀವ್ರವಾಗಿ ಖಂಡಿಸುತ್ತದೆ ಮತ್ತು ಬೆಲೆ ಏರಿಕೆಗಳನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸುತ್ತದೆ ಎಂದು ಹೇಳಿದೆ.

Leave a Reply

Your email address will not be published. Required fields are marked *